ನಾ ಹೊಸೆಯ ಹೊರಟೆ ಕವನ ಒಂದು,
ಅದೇನು ಮಹಾ ಎಂದು!
ತಿಳಿಗನ್ನಡ, ನುಡಿಗನ್ನಡ ತಿಳಿದಿದ್ದರಾಯ್ತೆಂದೇ!
ತಿಣುಕಾಡಿದೆ, ಪರದಾಡಿದೆ,ಹೊಳೆಯದೇತಕೆ ಪದ ಒಂದು,
ಸ್ಫೂರ್ತಿ ಮೂಡದೆ ಹೇಗೆ ಬರೆಯಲಿ ಕವನ ಒಂದು!
ತಂಪು ಪಾನೀಯ, ಬಿಸಿ ಪಾನೀಯ, ಹುರಿದ ಗೋಡಂಬಿ,
ಪ್ರಕೃತಿಯ ತಾಣ,ಮರ-ಗಿಡ, ನದಿ-ಬೆಟ್ಟ, ಪಕ್ಷಿಗಳ ಸಂಘ,
ಮೂಡಿಸದಾಯ್ತೆನಗೆ ಸ್ಪೂರ್ತಿ,
ಅದಿಲ್ಲದೆ ನಾ ಹೇಗೆ ಬರೆಯಲಿ ಕವನ?
ನನ್ನಂಥವನಿಗೆ ಹೀಗಾಗಿರಬೇಕಾದರೆ, ಹೇಗಾಗಿರಬೇಕು,
ಪಾಪ,ಪಂಪ,ರನ್ನರಿಗೆ, ಕುವೆಂಪು, ನಿಸಾರರಿಗೆ!
ಎಂದೆನಿಸಿ ಮರುಗಿತೆನ್ನ ಮನ,
ಇರಲಿ ಒಮ್ಮೆ ನೋಡೇ ಬಿಡೋಣ ಅವರ ಬರಹ
ಎಂದು ಹುಡುಕಿ ನೋಡಿದರೆ, ಏನಾಶರ್ಯ!!
ನಾ ಬರೆಯಬೇಕೆಂದಿದ್ದ ಪದಗಳು,ಸಾಲುಗಳು,
ಅವರಾಗಲೇ ನನ್ನಿಂದ ಕದ್ದು ಬರೆದೆ ಬಿಟ್ಟಿದ್ದಾರೆ,
ನಾ ಮಾಡಬೇಕಾದದ್ದು ಅವರೇ ಮಾಡಿರುವಾಗ,
ನಾ ಏಕೆ ಹೊಸೆಯಬೇಕು ಮತ್ತೊಂದು ಕವನ?!
No comments:
Post a Comment